ಬೆಂಗಳೂರು : ಶ್ರೀ ಕ್ಷೇತ್ರ ಆದಿಚುಂಚನಗಿರಿ ಮಹಾಸಂಸ್ಥಾನ ಮಠವು ಪ್ರತಿವರ್ಷವೂ ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದವರಿಗೆ 'ಚುಂಚಶ್ರೀ' ಪ್ರಶಸ್ತಿ ನೀಡಿ ಗೌರವಿಸುತ್ತದೆ. ಅದೇ ರೀತಿ, ಜ್ಞಾನ, ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಸಾಧನೆ ಮಾಡಿದವರನ್ನು ಗುರುತಿಸಿ ಗೌರವಿಸಲು 'ವಿಜ್ಞಾತಂ' ಪ್ರಶಸ್ತಿ ನೀಡಲಾಗುತ್ತದೆ. 2025ನೇ ಸಾಲಿನ ವಿಜ್ಞಾತಂ ಪ್ರಶಸ್ತಿಗೆ ಹರಿದ್ವಾರದ ಹರಿಹರ ಆಶ್ರಮ, ಜುನಾ ಅಖಾಡಾದ ಆಚಾರ್ಯ ಮಹಾಮಂಡಲೇಶ್ವರರಾದ ಪರಮಪೂಜ್ಯ ಶ್ರೀ ಅವಧೇಶಾನಂದ ಗಿರಿ ಮಹಾರಾಜ್ ಅವರು ಭಾಜನರಾದರು.
ಶ್ರೀ ಸ್ವಾಮಿ ಅವಧೇಶಾನಂದ ಗಿರಿ ಮಹಾರಾಜರು ಆಧ್ಯಾತ್ಮಿಕ ಸಂತರೂ, ತತ್ವಜ್ಞಾನಿಗಳೂ, ಮತ್ತು ಸಮಾಜ ಸುಧಾರಕರಾಗಿದ್ದಾರೆ. ತನ್ನ 17ನೇ ವಯಸ್ಸಿನಲ್ಲಿ ಆಧ್ಯಾತ್ಮಿಕ ಜ್ಞಾನವನ್ನು ಅರಸುತ್ತಾ ಪರಿವ್ರಾಜಕರಾದರು. 1985ರಲ್ಲಿ ಅವರು ಸ್ವಾಮಿ ಸತ್ಯಮಿತ್ರಾನಂದಗಿರಿ ಅವರ ಶಿಷ್ಯರಾದರು. ಬಳಿಕ, ಸ್ವಾಮಿ ಅವಧೇಶಾನಂದಗಿರಿ ಎಂಬ ಅಭಿದಾನ ಪಡೆದು, 1998ರಲ್ಲಿ ಜುನಾ ಅಖಾಡಾದ ಆಚಾರ್ಯ ಮಹಾಮಂಡಲೇಶ್ವರರನ್ನಾಗಿ ನೇಮಕಗೊಂಡರು. ಅವರು ಒಂದು ಲಕ್ಷಕ್ಕೂ ಹೆಚ್ಚಿನ ಸನ್ಯಾಸಿಗಳಿಗೆ ಆಧ್ಯಾತ್ಮಿಕ, ವೇದಾಂತ, ಯೋಗ ಕ್ಷೇತ್ರದಲ್ಲಿ ಮಾರ್ಗದರ್ಶನ ನೀಡಿದ್ದಾರೆ.
ಇದನ್ನೂ ಓದಿ:ದುಬೈನಲ್ಲೂ ನಡೆಯಿತು ದ್ವಿಭಾಷೆಗಳಲ್ಲಿ ನಿರ್ಮಾಣವಾಗುತ್ತಿರುವ "ವೀರ ಕಂಬಳ" ಚಿತ್ರದ ಚಿತ್ರೀಕರಣ
ಶಿಕ್ಷಣ, ಆರೋಗ್ಯ, ರಕ್ಷಣೆ ಮತ್ತು ಗ್ರಾಮೀಣ ಅಭಿವೃದ್ಧಿಗೆ ಅವರು ಕೊಡುಗೆ ನೀಡಿದ್ದಾರೆ. ಶ್ರೀಗಳು ಪವಿತ್ರ ಅಮರನಾಥ ಯಾತ್ರೆಯ ನಿರ್ವಹಣೆಯನ್ನು ನೋಡಿಕೊಳ್ಳುವ ದೇಗುಲ ಮಂಡಳಿಯ ಸದಸ್ಯರೂ ಆಗಿದ್ದಾರೆ. ಅವರು ವಿಶ್ವಸಂಸ್ಥೆ ಸೇರಿದಂತೆ, ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಸನಾತನ ಧರ್ಮವನ್ನು ಪ್ರತಿನಿಧಿಸಿದ್ದಾರೆ.
ವಿಜ್ಞಾತಂ ಪುರಸ್ಕಾರದ ಉದ್ಘಾಟನಾ ಸಮಾರಂಭವನ್ನು ಫೆಬ್ರವರಿ 19ರಂದು ನಡೆಸಲಾಯಿತು. ಪರಮಪೂಜ್ಯ ಡಾ. ಶ್ರೀ ನಿರ್ಮಲಾನಂದನಾಥ ಮಹಾಸ್ವಾಮೀಜಿ ದಿವ್ಯಸಾನ್ನಿಧ್ಯ ವಹಿಸಿ, ಆಶೀರ್ವಚನ ನೀಡಿದರು. ತುಮಕೂರಿನ ಸಿದ್ದಗಂಗಾ ಮಠಾಧೀಶರಾದ ಪರಮಪೂಜ್ಯ ಶ್ರೀ ಸಿದ್ದಲಿಂಗ ಮಹಾಸ್ವಾಮಿಗಳು ಸಮಾರಂಭದಲ್ಲಿ ದಿವ್ಯ ಉಪಸ್ಥಿತಿ ಹೊಂದಿ, ಸಮಾರಂಭವನ್ನು ಉದ್ಘಾಟಿಸಿದರು. ಕೃಷಿ ಸಚಿವರಾದ ಶ್ರೀ ಎನ್ ಚಲುವರಾಯಸ್ವಾಮಿ ಅವರು ವಿಜ್ಞಾತಂ ಸಂಚಯ - 3ನ್ನು ಬಿಡುಗಡೆಗೊಳಿಸಿದರು. ಸಮಾರಂಭದಲ್ಲಿ ಮಂಡ್ಯ ಕ್ಷೇತ್ರದ ಶಾಸಕರಾದ ರವಿ ಗಣಿಗ ಹಾಗೂ ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಾದ ಡಾ. ಶಾಲಿನಿ ರಜನೀಶ್, ಮಂಡ್ಯ ಜಿಲ್ಲಾಧಿಕಾರಿಗಳಾದ ಡಾ. ಕುಮಾರ್, ಜಿಲ್ಲಾ ಪಂಚಾಯತ್ ಸಿಇಒ ನಂದಿನಿ ಅವರು ಉಪಸ್ಥಿತರಿದ್ದರು.
ಸಮಾರಂಭದ ಅಂಗವಾಗಿ, ವಿಶೇಷ ವಸ್ತುಪ್ರದರ್ಶನವನ್ನು ಆಯೋಜಿಸಲಾಯಿತು. ಭಾರತೀಯ ವಿಜ್ಞಾನ ಸಂಸ್ಥೆಯ ಪ್ರಖ್ಯಾತ ವಿಜ್ಞಾನಿಗಳು, ಮಾಜಿ ರಾಷ್ಟ್ರಪತಿ ಹಾಗೂ ಶಿಕ್ಷಣ ತಜ್ಞರಾದ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ ಮೊಮ್ಮಗನಾದ ಡಾ. ಗೌತಮ್ ರಾಧಾಕೃಷ್ಣ ದೇಸಿರಾಜು ಅವರು ವಸ್ತು ಪ್ರದರ್ಶನವನ್ನು ಉದ್ಘಾಟಿಸಿದರು.
ಇದನ್ನೂ ಓದಿ:ಜನ ಮೆಚ್ಚಿದ "ಫಾರೆಸ್ಟ್": ಕಾಡಿನ ಕಥೆಗೆ 25 ದಿನಗಳ ಸಂಭ್ರಮ
ವಿಜ್ಞಾನ ವಸ್ತು ಪ್ರದರ್ಶನದಲ್ಲಿ ಬಿಜಿಎಸ್ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳು ವಿವಿಧ ವೈಜ್ಞಾನಿಕ ಮಾದರಿಗಳನ್ನು ಪ್ರಸ್ತುತಪಡಿಸಿದರು. ಎಚ್ಎಎಲ್ ಸಂಸ್ಥೆಯ ಮಾದರಿಗಳನ್ನೂ ವಸ್ತು ಪ್ರದರ್ಶನದಲ್ಲಿ ಪ್ರದರ್ಶಿಸಲಾಯಿತು. ರಕ್ಷಣಾ, ಬಾಹ್ಯಾಕಾಶ ವಿಶ್ಲೇಷಕರಾದ ಗಿರೀಶ್ ಲಿಂಗಣ್ಣ ಅವರು ಅಭಿವೃದ್ಧಿ ಪತ್ರಿಕೋದ್ಯಮ ಪ್ರಶಸ್ತಿಗೆ ಪಾತ್ರರಾಗಿದ್ದು, ಅವರನ್ನು ಈ ಸಂದರ್ಭದಲ್ಲಿ ಗೌರವಿಸಲಾಯಿತು.
ಸಮಾರಂಭದ ಅಂಗವಾಗಿ, ಫೆಬ್ರವರಿ 19, ಬುಧವಾರದಂದು ಇಸ್ರೋದ ನಿವೃತ್ತ ಗ್ರೂಪ್ ಡೈರೆಕ್ಟರ್ ಆದ ಡಾ. ಐ ವೇಣುಗೋಪಾಲ್ ಅವರು 'ರೋಲ್ ಆಫ್ ಇಂಜಿನಿಯರ್ಸ್ ಇನ್ ಸ್ಪೇಸ್ ಆ್ಯಂಡ್ ಚಂದ್ರಯಾನ್ ಮಿಷನ್ ಆ್ಯಂಡ್ ಫ್ಯೂಚರ್ ಹ್ಯುಮನ್ ಹ್ಯಾಬಿಟಾಟ್ಸ್' ವಿಚಾರದ ಕುರಿತು ಉಪನ್ಯಾಸ ನೀಡಿದರು.
ಬಳಿಕ, ಮೈಸೂರು ವಿಶ್ವವಿದ್ಯಾನಿಲಯದ ಪ್ರಾಣಿಶಾಸ್ತ್ರ ವಿಭಾಗ ಮುಖ್ಯಸ್ಥರಾದ ಪ್ರೊ ಎನ್ ಬಿ ರಾಮಚಂದ್ರ ಅವರು 'ಜೆನೆಟಿಕ್ಸ್ ಅಂಡ್ ಜೆನಾಮಿಕ್ಸ್ ಡಿಪಾರ್ಟ್ಮೆಂಟ್ಸ್ ಇನ್ ಮೆಡಿಕಲ್ ಸ್ಕೂಲ್' ವಿಚಾರದಲ್ಲಿ ಉಪನ್ಯಾಸ ನೀಡಿದರು. ಮೂರನೇ ಅವಧಿಯಲ್ಲಿ, ಬೆಂಗಳೂರಿನ ವಿಭು ಅಕಾಡೆಮಿಯ ಮುಖ್ಯಸ್ಥರಾದ ಡಾ. ವಿ ಬಿ ಆರತಿ ಅವರು ಭಾರತೀಯ ಸಾಹಿತ್ಯದಲ್ಲಿ ಮನೋವಿಜ್ಞಾನ ಎಂಬ ವಿಚಾರದ ಕುರಿತು ಉಪನ್ಯಾಸ ನೀಡಿದರು. ಸಮಾರಂಭದ ಅಂಗವಾಗಿ, ಫೆಬ್ರವರಿ 19ರಂದು ರಸಪ್ರಶ್ನೆ, ನೃತ್ಯೋತ್ಸವ, ಮತ್ತು ಸುಗಮ ಸಂಗೀತ ಸಮಾರಂಭವನ್ನು ಆಯೋಜಿಸಲಾಯಿತು.
ಪ್ರಶಸ್ತಿ ಪುರಸ್ಕಾರ ಸಮಾರಂಭವನ್ನು ಫೆಬ್ರವರಿ 20ರಂದು ನೆರವೇರಿಸಲಾಯಿತು. ಪ್ರಶಸ್ತಿ ಪುರಸ್ಕೃತರಾದ ಪರಮಪೂಜ್ಯ ಶ್ರೀ ಸ್ವಾಮಿ ಅವಧೇಶಾನಂದ ಗಿರಿ ಮಹಾರಾಜ್, ಆರ್ಷ ವಿದ್ಯಾ ಮಂದಿರ ರಾಜ್ಕೋಟ್, ಗುಜರಾತಿನ ಪರಮಪೂಜ್ಯ ಶ್ರೀ ಸ್ವಾಮಿ ಪರಮಾತ್ಮಾನಂದ ಸರಸ್ವತೀ ಸ್ವಾಮೀಜಿ, ಮೈಸೂರಿನ ಶ್ರೀ ರಾಮಕೃಷ್ಣ ಆಶ್ರಮದ ಪರಮಪೂಜ್ಯ ಶ್ರೀ ಸ್ವಾಮಿ ಮುಕ್ತಿದಾನಂದಜೀ ಮಹಾರಾಜ್, ವಿರೋಧ ಪಕ್ಷದ ನಾಯಕರಾದ ಶ್ರೀ ಆರ್ ಅಶೋಕ್, ಸಂಸದರಾದ ಡಾ. ಕೆ ಸುಧಾಕರ್, ಶಾಸಕರಾದ ಶ್ರೀ ಶರತ್ ಬಚ್ಚೇಗೌಡ ಮತ್ತಿತರರು ಉಪಸ್ಥಿತರಿದ್ದರು.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.