ನವದೆಹಲಿ: ಗಂಡ ಸತ್ತು ಒಂದೆರಡು ತಿಂಗಳಾಗಿಲ್ಲ ಆಗಲೇ ರಾಜಕೀಯಕ್ಕೆ ಬಂದಿದ್ದಾರೆ ಎಂದು ನಟ ದಿ. ಅಂಬರೀಶ್ ಪತ್ನಿ ಸುಮಲತಾ ಅವರ ವಿರುದ್ದ ಲೋಕೋಪಯೋಗಿ ಸಚಿವ ಹೆಚ್.ಡಿ ರೇವಣ್ಣ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ.
ನವದೆಹಲಿಯಲ್ಲಿರುವ ಕರ್ನಾಟಕ ಭವನದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವ ರೇವಣ್ಣ, 'ಗಂಡ ಸತ್ತು ಒಂದೆರಡು ತಿಂಗಳಾಗಿಲ್ಲ, ಸುಮಲತಾ ಅವರಿಗೆ ರಾಜಕೀಯ ಯಾಕೆ ಬೇಕಿತ್ತು' ಎಂದಿದ್ದಾರೆ.
ಅಂಬರೀಶ್ ಸತ್ತಾಗ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಕಂಬನಿ ಮಿಡಿದಿದ್ದರು. ಬರೀ ಹೂಗುಚ್ಛ ಕೊಟ್ಟು ಬರಬಹುದಿತ್ತು, ಆದರೆ ಬೆಳಿಗ್ಗೆ ಮೂರುಗಂಟೆವರೆಗೆ ಕೆಲಸ ಮಾಡಿದರು. ಆದರೆ, ಚುನಾವಣೆ ಸ್ಪರ್ಧೆ ಬಗ್ಗೆ ಸುಮಲತಾ ಅವರು ಸವಾಲು ಹಾಕುವುದರೊಂದಿಗೆ ಜೆಡಿಎಸ್ ಅನ್ನು ಕೆಣಕಿದ್ದಾರೆ' ಎಂದು ದೂರಿದರು.
ಸುಮಲತಾ ಸವಾಲು ಹಾಕಿದ್ದರಿಂದ ನಿಖಿಲ್ ಸ್ಪರ್ಧೆ:
ಮಂಡ್ಯ ಕ್ಷೇತ್ರದ ಸಂಸದರಾಗಿರುವ ನಿಮ್ಮ ಪಕ್ಷದ ಶಿವರಾಮೇಗೌಡರನ್ನು ಕೈಬಿಟ್ಟು ನಿಖಿಲ್ ಕುಮಾರಸ್ವಾಮಿಯನ್ನು ಆಯ್ಕೆ ಮಾಡಿರುವುದು ಸರಿಯೇ ಎನ್ನುವ ಪ್ರಶ್ನೆಗೆ ಉತ್ತರಿಸಿದ ಅವರು, "ಹಲವು ಬಾರಿ ಸಾಮಾನ್ಯ ಕಾರ್ಯಕರ್ತನಿಗೆ ಜೆಡಿಎಸ್ ಅವಕಾಶ ನೀಡಿದೆ ಹಾಗೂ ಗೆಲ್ಲಿಸಿದೆ. ಮೊದಲು ನಿಖಿಲ್ ಕುಮಾರಸ್ವಾಮಿ ಸ್ಪರ್ಧೆ ಬಗ್ಗೆ ಆಲೋಚನೆ ಇರಲಿಲ್ಲ. ಕೃತಜ್ಞತೆಯಿಲ್ಲದ ಸುಮಲತಾ ಅವರ ಸವಾಲನ್ನು ಸ್ವೀಕರಿ ನಿಖಿಲ್ ಸ್ಪರ್ಧೆ ವಿಚಾರ ಮಾಡಿದ್ದೇವೆ. ಅವರ ಸವಾಲನ್ನು ಸ್ವೀಕರಿಸುವುದು ನಮಗೂ ಅನಿವಾರ್ಯವಾಗಿದೆ" ಎಂದವರು ಹೇಳಿದರು.
'ಗಂಡ ಸತ್ತು ಒಂದೆರಡು ತಿಂಗಳಾಗಿಲ್ಲ. ಸುಮಲತಾ ಅವರಿಗೆ ರಾಜಕೀಯ ಯಾಕೆ ಬೇಕಿತ್ತು ಎಂಬ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡ ಸಚಿವ ರೇವಣ್ಣ, ಗಂಡ ಸತ್ತು ಇಷ್ಟು ಬೇಗ ರಾಜಕಾರಣಕ್ಕೆ ಬರಬಾರದು ಅಂತಾ ಹಿಂದೂ ಸಂಸ್ಕೃತಿ ಪ್ರಕಾರ ಮಾತನಾಡಿದ್ದೇನೆ. ಬೇರೆ ಉದ್ದೇಶದಿಂದ ಮಾತನಾಡಿಲ್ಲ. ಸುಮಲತಾ ಅವರಿಗೆ ಬೇಸರ ಆಗುವಂತೆ ಮಾತನಾಡಿಲ್ಲ, ಅವರ ಕ್ಷಮೆಯನ್ನೂ ಕೇಳುವುದಿಲ್ಲ ಎಂದಿದ್ದಾರೆ.